ವಿಶ್ವ ತುಳು ಸಂಘಟನೆಗಳ ಒಕ್ಕೂಟದ (ಗಟ) ಮನವಿ ಸ್ವೀಕರಿಸಿದ ಸಭಾಪತಿಗಳು
ಮಂಗಳೂರು, ಎಪ್ರಿಲ್ 05, 2025 (ಕರಾವಳಿ ಟೈಮ್ಸ್) : ವಿಶ್ವದ 27 ತುಳು ಸಂಘಟನೆಗಳ ಒಕ್ಕೂಟವಾಗಿರುವ ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಶನ್ಸ್ (ಗಟ-ಜಿಎಟಿಎ) ನಿಯೋಗವು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿತು.
ಯುನೈಟೆಡ್ ಆರಬ್ ಎಮಿರಟ್ಸ್ ಅನ್ನು ಪ್ರತಿನಿಧಿಸುತ್ತಿರುವ ಅನಿವಾಸಿ ಭಾರತೀಯ ಅಬುಧಾಬಿ ಉದ್ಯಮಿ ಸರ್ವೊತ್ತಮ ಶೆಟ್ಟಿ ಮುಂದಾಳುತ್ವದ ಗಟ ನಿಯೋಗದಲ್ಲಿ ಅಮೇರಿಕಾ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಆಲ್ ಆಮೆರಿಕ ತುಳು ಆಸೋಶಿಯೇಶನ್ ಸ್ಥಾಪಕಾಧ್ಯಕ್ಷ ಭಾಸ್ಕರ್ ಶೇರಿಗಾರ, ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಐಲೇಸಾ (ದ ವಾಯ್ಸ್ ಆಫ್ ಓಷಿಯನ್) ಸ್ಥಾಪಕ ಸದಸ್ಯ ಹಾಗೂ ನಿರ್ವಾಹಕ ಶಾಂತಾರಾಮ ಶೆಟ್ಟಿ ಬೆಂಗಳೂರು, ಪತ್ರಕರ್ತೆ ಡಾ ಪ್ರಿಯಾ ಶೆಟ್ಟಿ ಹಾಗೂ ತುಳು ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ದೇರಳಕಟ್ಟೆಯ ಹೊಟೇಲು ಉದ್ಯಮಿ ಸುಧಾಕರ ಶೆಟ್ಟಿ ಉಳ್ಳಾಲ ಅವರುಗಳು ಇದ್ದರು.
ಕರ್ನಾಟಕ ಕರಾವಳಿಯ ತುಳುನಾಡ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಿಂದ ಹೊರದೇಶಗಳಿಗೆ ತೆರಳಿ ವಿಶ್ವದಾದ್ಯಂತ ನೆಲಿಸಿರುವ ತುಳು ಭಾಷಿಗರ ಒಂದು ಸಂಘಟನೆ ಆಲ್ ಅಮೇರಿಕಾ ತುಳು ಅಸೋಶಿಯೇಶನ್ (ಆಟಾ) ಇದರ ಅಧ್ಯಕ್ಷ ಶ್ರೀವಲ್ಲಿ ರೈ ಮಾರ್ಟೆಲ್ ಅವರ ನೇತೃತ್ವದಲ್ಲಿ ರಚಿಸಿರುವ ಈ ಸಂಘಟನೆ, ಪ್ರಪಂಚದಾದ್ಯಂತ 27 ದೇಶಗಳಲ್ಲಿರುವ ತುಳು ಸಂಘಟನೆಗಳ ಮುಖ್ಯಸ್ಥರನ್ನು ಒಳಗೊಂಡಿದೆ. ತಮ್ಮ ಮಾತೃಭಾಷೆ ತುಳು ಮತ್ತು ಅದರ ಸಂಸ್ಕೃತಿ, ಸಾಹಿತ್ಯ ಹಾಗೂ ಲಿಪಿಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ಗಟ ಶ್ರಮಿಸುತ್ತಿದೆ.
ತುಳು ಭಾಷೆಯು ಸಾಧಾರಣ 2500 ವರ್ಷಗಳ ಇತಿಹಾಸ ಇರುವ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಕಾಲ ಚಕ್ರದ ತುಳಿತಕ್ಕೆ ಸಿಕ್ಕಿ ತುಳು ಭಾಷೆಯ ಅಭಿವೃದ್ದಿ ಇತರ ದ್ರಾವಿಡ ಭಾಷೆಗಳಿಗಿಂತ ಕ್ಷೀಣವಾಗಿದೆ. ತುಳು ಭಾಷೆ, ಸಾಹಿತ್ಯ ಮತ್ತು ಲಿಪಿಯ ಏಳಿಗೆಗೆ ವಿಶೇಷ ಸಹಾಯ ಹಾಗೂ ಸವಲತ್ತುಗಳ ಅವಶ್ಯಕತೆ ಇದೆ. ಕರ್ನಾಟಕ ಸರಕಾರ ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಅಂಗೀಕರಿಸಿ ಸಹಕರಿಸಬೇಕಾಗಿ ವಿಶ್ವದಾದ್ಯಂತ ಇರುವ ಎಲ್ಲಾ ತುಳು ಸಂಘಟನೆಗಳ ನಾಯಕರು ಒಟ್ಟಾಗಿ ಒಂದೇ ಮನಸ್ಸಿನಿಂದ ಈ ಮೂಲಕ ಒತ್ತಾಯಿಸುತ್ತಿದ್ದಾರೆ ಎಂದು ನಿಯೋಗ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿದ ಸಭಾಪತಿ ಯು.ಟಿ ಖಾದರ್ ಪ್ರತಿಕ್ರಯಿಸಿ, ವಿದೇಶದಲ್ಲಿರುವ ತುಳು ಭಾಷಿಗರ ಪ್ರಯತ್ನವನ್ನು ಕೊಂಡಾಡಿದರಲ್ಲದೆ ಈಗಾಗಲೇ ವಿವಿಧ ಸ್ಥರಗಳಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ಪ್ರಯತ್ನಗಳು ಸಾಗುತ್ತಿದೆ. ಶೀಘ್ರದಲ್ಲೇ ಒಂದು ಆಶಾದಾಯಕ ಬೆಳವಣಿಗೆ ಆಗಲಿದೆ, ಅದಕ್ಕೆಲ್ಲಾ ನಾವೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಇದು ಒಂದು ಪರ್ವಕಾಲ, ತಮ್ಮ ಅವಧಿಯಲ್ಲಿಯೇ ಈ ಒಂದು ಕಾರ್ಯ ಸಿದ್ಧಿಯಾದರೆ ಸರ್ವ ತುಳುವರ ಮನಸ್ಸಿನಲ್ಲಿ ತಮಗೊಂದು ವಿಶಿಷ್ಟ ಸ್ಥಾನ ಸಿಗಲಿದೆ, ಹಾಗಾಗಿ ತುಳುವಿಗೆ ರಾಜ್ಯ ಭಾಷೆಯ ಮಾನ್ಯತೆ ತೆಗೆದು ಕೊಡುವಲ್ಲಿ ನಿಮ್ಮ ಪಾತ್ರ ಹಿರಿದಿರಲಿ ಎಂದು ಗಲ್ಫ್ ದೇಶದ ಸಂಘಟಕ ಅಬುಧಾಬಿ ಸರ್ವೋತಮ ಶೆಟ್ಟಿ ಸ್ಪೀಕರ್ ಅವರಲ್ಲಿ ವಿನಂತಿಸಿದರು.
0 comments:
Post a Comment