ಬಿಜೆಪಿಗರಿಗೆ ಜನಪರ ಕಾಳಜಿಯಿದ್ದರೆ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಲಿ : ಡಾ ಮಂಜುನಾಥ ಭಂಡಾರಿ ಸವಾಲು - Karavali Times ಬಿಜೆಪಿಗರಿಗೆ ಜನಪರ ಕಾಳಜಿಯಿದ್ದರೆ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಲಿ : ಡಾ ಮಂಜುನಾಥ ಭಂಡಾರಿ ಸವಾಲು - Karavali Times

728x90

9 April 2025

ಬಿಜೆಪಿಗರಿಗೆ ಜನಪರ ಕಾಳಜಿಯಿದ್ದರೆ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಲಿ : ಡಾ ಮಂಜುನಾಥ ಭಂಡಾರಿ ಸವಾಲು

 ಮಂಗಳೂರು, ಎಪ್ರಿಲ್ 09, 2025 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಹಾಗೂ ಬೆಲೆ ಏರಿಕೆ ವಿರುದ್ಧ  ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಹಾಸ್ಯಾಸ್ಪದವಾಗಿದ್ದು, ನಿಜವಾಗಿಯೂ ಬಿಜೆಪಿಗರಿಗೆ ಈ ರಾಜ್ಯದ ಅಭಿವೃದ್ಧಿ ಮತ್ತು ಜನಪರ ಕಾಳಜಿಯಿದ್ದರೆ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಲಿ. ಬಿಜೆಪಿ ನಾಯಕರಿಗೆ ಪ್ರತಿಭಟನೆ ಬಿಡಿ, ಕೇಂದ್ರ ನಾಯಕರ ವಿರುದ್ಧ ಉಸಿರೆತ್ತುವ ತಾಕತ್ತು ಇಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ, ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಲೇವಡಿ ಮಾಡಿದ್ದಾರೆ.

ಕೇಂದ್ರ ಸರಕಾರ ಅಡುಗೆ ಸಿಲಿಂಡರ್ ದರವನ್ನು 50 ರೂಪಾಯಿ ಏರಿಕೆ ಮಾಡಿದೆ. ಭರವಸೆಗಳ ಸುರಿಮಳೆಯನ್ನೇ ಸುರಿಸಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಮರೆತುಬಿಟ್ಟು, ಬೆಲೆ ಏರಿಕೆಯ ಬರೆಯನ್ನು ಮತದಾರನಿಗೆ ನೀಡುತ್ತಿದೆ. ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಿದ್ದರೂ ದೇಶದಲ್ಲಿ ಕಚ್ಚಾತೈಲ ದರ ಕಡಿಮೆ ಮಾಡದೆ ಜನರನ್ನು ವಂಚಿಸಿದೆ. ಜಿಎಸ್‍ಟಿ ಹೊರೆಯನ್ನು ಜನರಿಗೆ ಹಾಕಿ ಸುಲಿಗೆ ಮಾಡಿದ್ದಲ್ಲದೆ ನಮ್ಮ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲನ್ನು ಸಮರ್ಪಕವಾಗಿ ನೀಡುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಬರಬೇಕಾದ ಹಣವನ್ನು ಕೇಂದ್ರ ನೀಡಿಲ್ಲ. ರಾಜ್ಯ ಬಿಜೆಪಿಗರಿಗೆ ರಾಜ್ಯದ ಜನರ ಬಗ್ಗೆ ಹಾಗೂ ಅಭಿವೃದ್ಧಿಯ ಬಗ್ಗೆ ಕಾಳಜಿಯಿದ್ದರೆ ಹೊಸದಿಲ್ಲಿಗೆ ತೆರಳಿ ಜನಾಕ್ರೋಶ ಯಾತ್ರೆ ಮಾಡಲಿ ಎಂದು ಭಂಡಾರಿ ಸವಾಲೆಸೆದಿದ್ದಾರೆ.

ರಾಜ್ಯದಲ್ಲಿ  ಗ್ರಾರಂಟಿ ಯೋಜನೆ ಅನುಷ್ಠಾನವಾದ ಬಳಿಕ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ. ಸವದತ್ತಿ ಚಿಕ್ಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಪೃಥ್ವಿ ಹೋಳಿ ಗೃಹಲಕ್ಷ್ಮಿ ಹಣದಿಂದ ಶಿಕ್ಷಣ ಕಲಿತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿರುವುದು ಇದಕ್ಕೆ ನಿದರ್ಶನ. ಇದೇ ರೀತಿ ಕೋಟ್ಯಂತರ ಕುಟುಂಬಗಳಿಗೆ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಗ್ರಾಮ ಗ್ರಾಮಗಳಲ್ಲಿ ಆರ್ಥಿಕ ಚೈತನ್ಯ ಸೃಷ್ಟಿಯಾಗಿದೆ, ಅಭಿವೃದ್ಧಿ ಕಾಣುತ್ತಿದೆ. ಗ್ಯಾರಂಟಿ ಯೋಜನೆಯಿಂದ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದೆ. ಗ್ಯಾರಂಟಿ ಯೋಜನೆಗೆ ಜನಸಾಮಾನ್ಯರ ಸ್ಪಂದನೆ ಹಾಗೂ ರಾಜ್ಯ ಸರಕಾರದ ಪರ ಜನರ ಒಲವನ್ನು ಕಂಡು ಬಿಜೆಪಿ ನಾಯಕರು ತಲ್ಲಣಗೊಂಡಿದ್ದು ಜನಾಕ್ರೋಶ ಮೂಲಕ ಜನರನ್ನು ಹಾದಿತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ರಾಜ್ಯದ ಜನತೆ ಬುದ್ಧಿವಂತರು, ಬಿಜೆಪಿ ಟೀಮಿನ ಯಾವ ನಾಟಕನೂ ಫಲ ಕೊಡಲ್ಲ ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನಾನಾ ಬಂಡಾಯ ಬಣಗಳಿದ್ದು, ಒಂದೊಂದು ನಾಟಕ ಕಂಪೆನಿಗಳಂತಾಗಿದೆ. ಬಿಜೆಪಿಯಲ್ಲಿ ನೇರಾ-ನೇರ ಮಾತನಾಡುವವರನ್ನು ಪಕ್ಷದಿಂದ ದೂರವಿಡುತ್ತಾರೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಮತ್ತಷ್ಟು ಬಂಡಾಯ ನಾಯಕರು ಹುಟ್ಟಿಕೊಳ್ಳಲಿದ್ದಾರೆ ಎಂದು ಡಾ ಭಂಡಾರಿ ಭವಿಷ್ಯ ನುಡಿದಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿಗರಿಗೆ ಜನಪರ ಕಾಳಜಿಯಿದ್ದರೆ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಲಿ : ಡಾ ಮಂಜುನಾಥ ಭಂಡಾರಿ ಸವಾಲು Rating: 5 Reviewed By: karavali Times
Scroll to Top