ಮಳೆಯಲ್ಲಿ ನೆನದು ಓಡಾಡಿದ್ರೆ ಇನ್ನು ಮುಂದೆ ರಜೆ ಕೊಡಲ್ಲ : ಆಲಡ್ಕದಲ್ಲಿ ಮಕ್ಕಳೊಂದಿಗೆ ಕುಶಲೋಪರಿ ಮಾತುಕತೆ ನಡೆಸಿದ ಜಿಲ್ಲಾ ದಂಡಾಧಿಕಾರಿ
ಬಂಟ್ವಾಳ, ಜುಲೈ 19, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆ ಕಾರಣದಿಂದ ಇಲ್ಲಿನ ಜೀವನದಿ ನೇತ್ರಾವತಿ ಅಪಾಯದ ಮಟ್ಟ ಮೀರಿದ ಹಂತಕ್ಕೆ ತಲುಪುತ್ತಿದ್ದು, ಈಗಾಗಲೆ ಕೆಲ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಇನ್ನೂ ಮಳೆ ಮುಂದುವರಿದರೆ ಇನ್ನಷ್ಟು ಪ್ರದೇಶಗಳು ನೆರೆ ಬಾಧಿತವಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತ ಕಾಲ ಕಾಲಕ್ಕೆ ನೀಡುವ ಎಲ್ಲಾ ಸುರಕ್ಷಾ ಕ್ರಮಗಳನ್ನು ಪಾಲಿಸುವ ಮೂಲಕ ಮುಂಜಾಗ್ರತೆಯೊಂದಿಗೆ ಜಿಲ್ಲಾಡಳಿತದೊಂದಿಗೆ ಪೂರ್ಣ ಸಹಕಾರ ನೀಡಬೇಕು ಎಂದು ದ ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕೋರಿದ್ದಾರೆ.
ಮಳೆ ಹಾಗೂ ನೆರೆ ಬಾಧಿತ ಪ್ರದೇಶಗಳ ವೀಕ್ಷಣೆ ಹಾಗೂ ಪರಿಶೀಲನೆ ನಿಟ್ಟಿನಲ್ಲಿ ಶುಕ್ರವಾರ ಅಪರಾಹ್ನ ಬಂಟ್ವಾಳಕ್ಕೆ ಭೇಟಿ ನೀಡಿದ ಅವರು ಜನತೆಯೊಂದಿಗೆ ಈ ಮನವಿಯನ್ನು ಮಾಡಿದ್ದಾರೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಹವಾಮಾನ ಇಲಾಖೆಯ ಮುನ್ಸೂಚನೆಗೆ ಹೊಂದಿಕೊಂಡು ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿದ್ದು, ಈ ಅವಕಾಶವನ್ನು ಮಕ್ಕಳಾಟಿಕೆಯಾಗಿ ಬಳಸದೆ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ತೀವ್ರ ನಿಗಾ ಇರಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಮಳೆಯ ನಡುವೆ, ನೆರೆ ನೀರಿನ ನಡುವೆ ಹಾಗೂ ನೀರಿನ ಮೂಲಗಳ ಬಳಿ ಸುತ್ತಾಡಲು ಬಿಡದೆ ಮನೆಯಲ್ಲೇ ಇರುವಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಾಕೃತಿಕ ವಿಕೋಪಗಳ ಬಗ್ಗೆ ಎಲ್ಲ ರೀತಿಯಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದ್ದರೂ ಕೆಲವೊಮ್ಮೆ ವಿಕೋಪಗಳನ್ನು ಮುಂದಾಗಿ ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಅಪಾಯಕರ ಸನ್ನಿವೇಶ ಜೀವಹಾನಿಯಂತಹ ಘಟನೆಗಳನ್ನು ನಿಭಾಯಿಸಲು ಜಿಲ್ಲಾಡಳಿತ, ಅಧಿಕಾರಿ ವರ್ಗದೊಂದಿಗೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕಾಗಿದೆ ಎಂದರು.
ಈ ರೀತಿ ಮನೆಯಲ್ಲಿ ಓಡಾಡಿದ್ರೆ ರಜೆ ಕೊಡಲ್ಲ : ಮಕ್ಕಳೊಂದಿಗೆ ಮಾತುಕತೆ
ಪಾಣೆಮಂಗಳೂರು ಸಮೀಪದ ಆಲಡ್ಕ ನೆರೆಬಾಧಿತ ಪ್ರದೇಶ ಪರಿಶೀಲನೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸ್ಥಳದಲ್ಲಿ ಮಳೆಯಲ್ಲಿ ನೆನೆದು ರಜೆ ಕೊಡುವ ಡೀಸಿಯನ್ನು ಕಣ್ಣಾರೆ ನೋಡುವ ಕುತೂಹದಲ್ಲಿದ್ದ ಮಕ್ಕಳೊಂದಿಗೆ ಕೆಲಕಾಲ ಕುಶಲೋಪರಿ ಮಾತನಾಡಿದರು. ಈ ರೀತಿಯಲ್ಲಿ ಮಳೆಯಲ್ಲಿ ನೆನೆದು ಓಡಾಡಿದ್ರೆ ಇನ್ನು ರಜೆ ಕೊಡಲ್ಲ ಎಂದು ಡೀಸಿ ಮಕ್ಕಳಿಗೆ ಹೇಳಿ ಮಕ್ಕಳ ಬೆನ್ನುತಟ್ಟಿ ಅಲ್ಲಿಂದ ನಿರ್ಗಮಿಸಿದರು.
ಎಡಿಸಿ ಜಿ ಸಂತೋಷ್, ಎಸಿ ಹರ್ಷವರ್ದನ್, ಜಿಲ್ಲಾ ಎಸ್ಪಿ ಯತೀಶ್ ಎನ್, ಜಿ ಪಂ ಸಿಇಒ ಆನಂದ, ಬಂಟ್ವಾಳ ತಾ ಪಂ ಇಒ ಆನಂದ ಸಹಿತ ಕಂದಾಯ ಇಲಾಖಾಧಿಕಾರಿಗಳು ಜೊತೆಗಿದ್ದರು.
0 comments:
Post a Comment