ವಿಟ್ಲ (ಕರಾವಳಿ ಟೈಮ್ಸ್) : ವಿಟ್ಲ ಪಟ್ಟಣಕ್ಕೆ ಸರಕಾರಿ ಜನೌಷಧಿ ಕೇಂದ್ರ ಮಂಜೂರು ಮಾಡುವಂತೆ ಇಲ್ಲಿನ ಡಿವೈಎಫ್ಐ ಮುಖಂಡರು ಉಪ ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ.
ವಿಟ್ಲ ಪಟ್ಟಣವು ಒಂದು ತಾಲೂಕಿಗೆ ಅರ್ಹತೆ ಇರುವ ಪಟ್ಟಣವಾಗಿದ್ದು, ಸುತ್ತಮುತ್ತಲಿನ ಹಲವಾರು ಹಳ್ಳಿ ಹಾಗೂ ಗ್ರಾಮೀಣ ಭಾಗದ ಜನ ವಿಟ್ಲ ಪಟ್ಟಣವನ್ನು ಅವಲಂಬಿಸಿದ್ದಾರೆ. ವಿಟ್ಲ ಪಟ್ಟಣವು ಹೆಚ್ಚಿನ ಜನವಸತಿ ಇರುವ ಪ್ರದೇಶವಾಗಿದೆ. ವಿಟ್ಲದಲ್ಲಿ ಈಗ ಒಂದು ಜನೌಷಧಿ ಕೇಂದ್ರ ಇದ್ದು, ಅದು ಖಾಸಗಿ ಮೆಡಿಕಲ್ ಜೊತೆಗೆ ಕಾರ್ಯಾಚರಿಸುತ್ತಿದೆ. ಅಲ್ಲದೆ ಅಲ್ಲಿ ಜನರಿಗೆ ಬೇಕಾದ ಔಷದಿಗಳು ಲಭ್ಯವಿರುವುದಿಲ್ಲ. ಬಡ ಮಧ್ಯಮ ವರ್ಗದ ಜನರಿಗೆ ಇಂದು ದುಬಾರಿ ಬೆಲೆ ನೀಡಿ ಔಷದಿಗಳನ್ನು ಖರೀದಿ ಮಾಡಲು ಕಷ್ಟಸಾಧ್ಯವಾಗಿದೆ.
ಸರಕಾರವು ಜನರಿಗೆ ಕಡಿಮೆ ಬೆಲೆಗೆ ಔಷಧಿ ಸಿಗುವಂತಾಗಲು ಜನೌಷಧಿ ಯೋಜನೆಯನ್ನು ಜಾರಿಗೊಳಿಸಿದ್ದು ಆದರೆ ವಿಟ್ಲದ ಜನತೆ ಈ ಯೋಜನೆಯ ಪ್ರಯೋಜನ ಪಡೆಯಲು ಕಷ್ಟಸಾಧ್ಯವಾಗಿದೆ. ಇಂದು ಹೆಚ್ಚಿನ ಪಟ್ಟಣಗಳಲ್ಲಿ ಹಲವು ಜನೌಷದಿ ಕೇಂದ್ರಗಳು ಇದ್ದು ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ವಿಟ್ಲದ ಜನತೆಗೆ ಅದು ಮರೀಚಿಕೆಯಾಗಿದೆ.
ವಿಟ್ಲ ಆಸುಪಾಸಿನ ಜನರಿಗೆ ಕಡಿಮೆ ಬೆಲೆಗೆ ಔಷಧಿಗಳು ದೊರಕುವಂತಾಗಲು ವಿಟ್ಲ ಪಟ್ಟಣಕ್ಕೆ ಜನೌಷಧಿ ಕೇಂದ್ರ ಮಂಜೂರು ಮಾಡಬೇಕಾಗಿ ಒತ್ತಾಯಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ನಾಡಕಚೇರಿ ಉಪ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಡಿ.ವೈ.ಎಫ್.ಐ. ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ವಿಟ್ಲ ವಲಯ ಸಮಿತಿ ಅಧ್ಯಕ್ಷ ನುಜುಂ ಅಳಿಕೆ, ಮುಖಂಡರಾದ ತಮೀಮ್ ಎಂ.ಕೆ., ಜಲೀಲ್ ಅಳಿಕೆ ಮೊದಲಾದವರು ಇದ್ದರು.
0 comments:
Post a Comment